ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳ ಅನುಷ್ಠಾನ : ಶ್ರೀಮತಿ ವಂದಿತಾ ಶರ್ಮಾ, IAS.
ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗಳೊಳಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ರಾಜ್ಯ ಸರ್ಕಾರವು ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರು ಮತ್ತು ಕೃಷಿ ಉತ್ಪನ್ನ ಆಯುಕ್ತರಾದ ಶ್ರೀಮತಿ ವಂದಿತಾ ಶರ್ಮಾ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹೊಂಬಾಳೆ ಅರಳಿಸುವ ಮೂಲಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮಹಿಳೆಯರಿಗಾಗಿ ಪಂಚಾಯತ್ ರಾಜ್ನಲ್ಲಿ ಶೇ.50/-, ಪೊಲೀಸ್ ಇಲಾಖೆಯಲ್ಲಿ ಶೇ.25/- ಹಾಗೂ ಸರ್ಕಾರಿ ಕೆಲಸದಲ್ಲಿ ಶೇ.33/- ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸುವುದರ ಜೊತೆಗೆ ಸಾಲ-ಸೌಲಭ್ಯಗಳನ್ನು ಜಾರಿಗೊಳಿಸಿರುವುದರಿಂದ, ಮಹಿಳೆಯರು ತಮಗೆ ನೀಡಿರುವ ಸರ್ಕಾರದ ಯೋಜನೆಗಳನ್ನು ಉಪಯೋಗಿಸಿಕೊಂಡು ಆರ್ಥಿಕವಾಗಿ ಸಬಲರಾಗುವುದರ ಜೊತೆಗೆ ದೇಶದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.
ಮಹಿಳೆಯರಿಗೆ ಮನೆಯಲ್ಲಿಯು ಸಹಕಾರ ನೀಡಬೇಕು. ಹೆಣ್ಣಿಗೆ ಯಾವ ರೀತಿ ಗೌರವ ಕೊಡಬೇಕು ಎನ್ನುವ ಬಗ್ಗೆ ತಾಯಿ ತನ್ನ ಮಕ್ಕಳಿಗೆ ಚಿಕ್ಕಂದಿನಿಂದಲೆ ಕಲಿಸಿಕೊಡಬೇಕು. ಒಂದು ದಿನ ಮಹಿಳಾ ದಿನಾಚರಣೆಯಾದರೆ ಸಾಲದು. ಪ್ರತಿ ದಿನವು ಮಹಿಳಾ ದಿನಾಚರಣೆಯಾಗಬೇಕು. ಮಹಿಳೆಯರನ್ನು ಪೂಜಿಸಿದರೆ ಸಾಲದು, ಅವರಿಗೆ ಗೌರವ-ಸಮಾನತೆ ಕೊಟ್ಟರೆ ಸಾಕು ಎಂದರು.
ಸಮಾಜದಲ್ಲಿ ಮುಂದೆ ಬರುವ ಮಹಿಳೆಯರಿಗೆ ಪುರುಷರು ಬೆಂಬಲ ನೀಡುವುದರ ಜೊತೆಗೆ ಮುಂದಿನ ಜನಾಂಗಕ್ಕೂ ಅರಿವು ಮೂಡಿಸಬೇಕು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಮುಂದಿದ್ದು, ಅವರಿಂದ ನಮ್ಮ ಸಮಾಜದಲ್ಲಿ ದೊಡ್ಡ ಬದಲಾವಣೆ ಸಾಧ್ಯ ಎಂದರು.
ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಯೋಜಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ಅವರಿಗೆ ಅಭಿನಂದಿಸಿ, ಮಹಿಳಾ ಸರ್ಕಾರಿ ನೌಕರರ ಅಭ್ಯುದಯಕ್ಕಾಗಿ ಅವರು ನೀಡುತ್ತಿರುವ ಕೊಡುಗೆಗಳನ್ನು ಶ್ಲಾಘಿಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, “ಸ್ಪೂರ್ತಿದಾಯಿನಿ-ಪ್ರಗತಿಗಾಮಿನಿ, ನಾ-ಹೆಣ್ಣೆಂಬುದೇ ಹೆಮ್ಮೆ“ ಎಂಬ ಶೀರ್ಷಿಕೆಯಡಿ ಇಡೀ ರಾಜ್ಯಾದ್ಯಂತ ಮೊಟ್ಟ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮಾಡುತ್ತಿದ್ದೇವೆ. ಇನ್ನು ಮುಂದೆ ಪ್ರತಿ ವರ್ಷ ಮಾರ್ಚ್ 8ರಂದು ಬೆಂಗಳೂರು ನಗರದಲ್ಲಿ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುವುದು ಎಂದರು.
ಸರ್ಕಾರಿ ನೌಕರರ ಸಂಘವು ಮಹಿಳೆಯರಿಗೆ ನ್ಯಾಯ ಕೊಡಿಸುವುದರ ಜೊತೆಗೆ, ಅವರ ಜೊತೆಗೆ ನಾವಿರುತ್ತೇವೆ ಎಂಬ ಭರವಸೆಯನ್ನು ನೀಡುತ್ತೇನೆ. ಮಹಿಳೆಯರಿಗಾಗಿ 6 ತಿಂಗಳ ಶಿಶುಪಾಲನಾ ರಜೆ, ಸಲಹಾಕೇಂದ್ರ, ಸೇವಾ ಕೇಂದ್ರ, ಕಾನೂನು ಕೇಂದ್ರಗಳನ್ನು ಸ್ಥಾಪಿಸುವುದರ ಜೊತೆಗೆ ಮಹಿಳಾ ಮತ್ತು ಪುರುಷ ಕ್ಯಾನ್ಸರ್ ಹಾಗೂ ಕಿಡ್ನಿ ಡಯಾಲಿಸಿಸ್ ಪಡೆಯುವ ರೋಗಿಗಳಿಗೆ ವಿಶೇಷ ರಜೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಸರ್ಕಾರವು “ಸುಸ್ಥಿರ ನಾಡಿಗಾಗಿ ಲಿಂಗ ಸಮಾನತೆ“ ಎಂಬ ಶೀರ್ಷಿಕೆಯಡಿ ಮಹಿಳೆಯರ ಸಬಲೀಕರಣಕ್ಕಾಗಿ ಅನೇಕ ಕೆಲಸ ಮಾಡುತ್ತಿದೆ. ತೊಟ್ಟಿಲು ತೂಗುವ ಕೈ ದೇಶವನ್ನೇ ಆಳಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ಬೇರೆ ಜಿಲ್ಲೆಯಿಂದ ಬರುವ ಮಹಿಳೆಯರಿಗೆ ಈ ಮೊದಲು ನೌಕರರ ಭವನದಲ್ಲಿ ಮೂಲಭೂತ ಸೌಲಭ್ಯಗಳಿರಲಿಲ್ಲ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ 60 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿ ಮೂಲ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೇಂದ್ರದ ಮಾದರಿಯಲ್ಲಿಯೆ ರಾಜ್ಯದಲ್ಲಿನ ಸರ್ಕಾರಿ ನೌಕರರಿಗೆ 7ನೇ ವೇತನ ನೀಡಲು ಬದ್ದನಾಗಿದ್ದೇನೆ ಎಂದು ತಿಳಿಸಿದ್ದಾರೆ ಎಂದರು.
ಬೆಂಗಳೂರು ನಗರದಲ್ಲಿನ 87 ಇಲಾಖೆಯಲ್ಲಿನ 10 ಸಾವಿರ ನೌಕರರಿಗೆ ಖುದ್ದು ಆಮಂತ್ರಣ ನೀಡಿ ಆಹ್ವಾನಿಸಿದ್ದೇವೆ. ಮಹಿಳೆಯರ ಅಭ್ಯುದಯದ ಜೊತೆಗೆ ದೇಶ ಕಟ್ಟುವ ಕೆಲಸಕ್ಕೂ ಮುಂದಾಗಬೇಕೆಂದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಮಹಿಳಾ ಕುಸ್ತಿ ಕ್ರೀಡಾಪಟು ಶ್ರೀಮತಿ ರತ್ನಮಾಲ ಅವರು ಕುಸ್ತಿ ಆಡುವ ಸಂದರ್ಭದಲ್ಲಿ ಕೈಗೆ ಗಾಯವಾಗಿದ್ದರಿಂದ ಸಂಘದ ವತಿಯಿಂದ 25 ಸಾವಿರ ಪರಿಹಾರ ವಿತರಿಸಲಾಯಿತು.
ಕರ್ನಾಟಕ ರಾಜ್ಯ ಕರಕುಶಲ ಅಭಿವೃಧ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಡಿ.ರೂಪಾ ಮೌದ್ಗಿಲ್ ಅವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನ್ಯಾಯಾಧೀಶರುಗಳಾದ ಶ್ರೀಮತಿ ಸುನಿತಾ ಶರ್ಮಾ, ಶ್ರೀಮತಿ ಮೋಹನ್ ಕುಮಾರಿ, ರಾಜ್ಯ ಉಪಾಧ್ಯಕ್ಷರಾದ ಹೆಚ್.ಎಸ್. ಹೇಮಲತಾ, ರಾಜ್ಯ ಜಂಟಿ ಕಾರ್ಯದರ್ಶಿ ಶ್ರೀಮತಿ ರುಚಿತ, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಮತಿ ಯಶೋಧ, ರಾಜ್ಯ ಪರಿಷತ್ ಸದಸ್ಯರು ಶ್ರೀಮತಿ ರೋಷಿಣಿ ಮುಂತಾದವರು ಉಪಸ್ಥಿತರಿದ್ದರು.
Comments
Post a Comment